ಬೃಜಮೋಹನ್ ನಾಥ್‌ ಮಿಶ್ರಾ (ಪಂಡಿತ್‌ ಬಿರ್ಜೂ ಮಹಾರಾಜ್‌ ಎಂದು ಚಿರಪರಿಚಿತ) (ಜನನ: 4 ಫೆಬ್ರವರಿ 1938 ಮರಣ 17 ಜನವರಿ 2022) ಭಾರತದಲ್ಲಿ ಕಥಕ್‌ ನೃತ್ಯದ ಲಖನೌ ಕಾಲ್ಕಾ-ಬಿಂದಾದಿನ್ ‌ ಘರಾನಾ ಶೈಲಿಯ ಪ್ರಮುಖ ನೃತ್ಯ ಪರಿಣತ ಕಲಾಗಾರರಾಗಿದ್ದಾರೆ. ಇವರು ಕಥಕ್‌ ನೃತ್ಯ ಕಲಾವಿದರಾದ ಮಹಾರಾಜ್‌ ಕುಟುಂಬದ ವಂಶಸ್ಥರು. ಅವರ ತಂದೆ,ಗುರು ಅಚ್ಚನ್‌ ಮಹಾರಾಜ್‌ ಹಾಗೂ ಅವರ ತಂದೆಯ ಸಹೋದರರಾದ ಶಂಭು ಮಹಾರಾಜ್‌ ಮತ್ತು ಲಚ್ಚೂ ಮಹಾರಾಜ್‌ ಸಹ ಕಥಕ್‌ ಪರಿಣತರಾಗಿದ್ದರು. ನೃತ್ಯ ಕಲೆಯತ್ತ ಮೊದಲ ಒಲವಿದ್ದರೂ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಸಹ ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು ಹೆಸರಾಂತ ಗಾಯಕರೂ ಹೌದು. ಕಥಕ್‌ ನೃತ್ಯ-ನಾಟಕಗಳನ್ನು ನವೀನ ಶೈಲಿಯಲ್ಲಿ ಸಂಯೋಜಿಸುವುದರ ಮೂಲಕ ಕಥಕ್‌ ನೃತ್ಯಕಲೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ದರು. ವಿಶ್ವದ ಹಲವೆಡೆ ಅವರು ಪ್ರವಾಸ ಮಾಡಿ, ಸಾವಿರಾರು ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ, ಕಥಕ್‌ ಕಲಿಯುವ ಆಸಕ್ತರಿಗಾಗಿ ನೂರಕ್ಕೂ ಹೆಚ್ಚು ನೃತ್ಯಕಮ್ಮಟ,ಕಾರ್ಯಾಗಾರಗಳನ್ನು ನಡೆಸಿದ್ದಾರೆ. ನವದೆಹಲಿಯಲ್ಲಿನ ಭಾರತೀಯ ಕಲಾ ಕೇಂದ್ರ(ಆನಂತರ ಕಥಕ್‌ ಕೇಂದ್ರ)ದಲ್ಲಿ ತಮ್ಮ ತಂದೆಯವರ ಸಹೋದರ ಶಂಭು ಮಹಾರಾಜ್‌ ಅವರೊಂದಿಗೆ ಕಾರ್ಯನಿರ್ವಹಿಸಿದರು. ನಂತರ ಬಿರ್ಜೂ, ಹಲವು ವರ್ಷಗಳ ಕಾಲ ಈ ನೃತ್ಯಶಾಲೆಯ ಅಧ್ಯಕ್ಷರಾಗಿದ್ದರು.ತರುವಾಯ 1998ರಲ್ಲಿ ನಿವೃತ್ತರಾದ ಬಳಿಕ, ದೆಹಲಿಯಲ್ಲಿ ಕಲಾಶ್ರಮ ಎಂಬ ತಮ್ಮದೇ ಆದ ನೃತ್ಯಶಾಲೆಯನ್ನು ಬಿರ್ಜೂ ಆರಂಭಿಸಿದರು. == ಆರಂಭಿಕ ಜೀವನ ಮತ್ತು ಹಿನ್ನೆಲೆ == ಲಖನೌ ಘರಾನಾಗೆ ಸೇರಿದ, ಖ್ಯಾತ ಕಥಕ್‌ ಪರಿಣತ ಜಗನ್ನಾಥ್‌ ಮಹಾರಾಜ್‌ರವರ (ಅಚ್ಚನ್ ಮಹಾರಾಜ್‌ ಎಂದು ಚಿರಪರಿಚಿತ) ಮನೆಯಲ್ಲಿ ಬಿರ್ಜೂ ಮಹಾರಾಜ್‌ ಜನಿಸಿದರು. ಆಗಿನ ಜಗನ್ನಾಥ್‌ ಮಹಾರಾಜ್‌,ರಾಯ್‌ಗಢ್‌ ಪ್ರಾಂತ್ಯದಲ್ಲಿನ ಸಂಸ್ಥಾನದ ಅರಮನೆಯ ನೃತ್ಯಕಲಾವಿದರಾಗಿದ್ದರು. ತಮ್ಮ ತಂದೆ ಹಾಗೂ ಲಚ್ಚೂ ಮಹಾರಾಜ್‌ ಮತ್ತು ಶಂಭೂ ಮಹಾರಾಜ್‌ ಅವರಿಂದ ಬಿರ್ಜೂ ನೃತ್ಯವಿದ್ಯೆ ಕಲಿತರು. ತಮ್ಮ ಏಳನೆಯ ವಯಸ್ಸಿನಲ್ಲಿಯೇ ಬಿರ್ಜೂ ಮೊದಲ ಬಾರಿಗೆ ನೃತ್ಯಪ್ರದರ್ಶನ ನೀಡಿದರು. ಬಿರ್ಜೂ ಒಂಬತ್ತು ವರ್ಷದವರಾಗಿದ್ದಾಗ, 1947ರ ಮೇ 20ರಂದು ಅವರ ತಂದೆ ನಿಧನರಾದರು. ಕೆಲವು ವರ್ಷಗಳ ಕಾಲ ಆರ್ಥಿಕ ಕಷ್ಟಗಳನ್ನು ಎದುರಿಸಿದ ನಂತರ, ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. == ವೃತ್ತಿಜೀವನ == ನವದೆಹಲಿಯ ಸಂಗೀತ್‌ ಭಾರತಿ ಸಂಸ್ಥೆಯಲ್ಲಿ ಬಿರ್ಜೂ ಮಹಾರಾಜ್‌ ಈ ನೃತ್ಯಕಲೆಯ ವಿದ್ಯೆಯನ್ನು ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಕಲಿಸಲಾರಂಭಿಸಿದರು. ನಂತರ, ಅವರು ನವದೆಹಲಿಯ ಭಾರತೀಯ ಕಲಾ ಕೇಂದ್ರ ಹಾಗೂ ಕಥಕ್‌ ಕೇಂದ್ರಗಳಲ್ಲಿ ಕಥಕ್‌ ನೃತ್ಯ ಕಲೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಕಥಕ್‌ ಕೇಂದ್ರವು ಸಂಗೀತ ನಾಟಕ ಅಕಾಡೆಮಿಯ ಅಂಗಸಂಸ್ಥೆಯಾಗಿತ್ತು. ಬಿರ್ಜೂ ಮಹಾರಾಜ್‌ ಸಂಗೀತ ನಾಟಕ ಅಕಾಡೆಮಿಯ ಬೋಧಕವೃಂದದ ಮುಖ್ಯಸ್ಥರಾಗಿದ್ದರು. ಆಗ 1998ರಲ್ಲಿ ನಿವೃತ್ತರಾದ ನಂತರ, ತಮ್ಮದೇ ಆದ ಕಥಕ್‌ ಮತ್ತು ಭಾರತೀಯ ಲಲಿತ ಕಲಾ ಅಕಾಡೆಮಿ 'ಕಲಾಶ್ರಮ' ಸಂಸ್ಥೆ ಸ್ಥಾಪಿಸಿದರು. ಸತ್ಯಜಿತ್‌ ರಾಯ್‌ ನಿರ್ದೇಶನದ ಶತರಂಜ್‌ ಕೆ ಖಿಲಾಡಿ ಎಂಬ ಹಿಂದಿ ಚಲನಚಿತ್ರದ ಎರಡು ನೃತ್ಯ ದೃಶ್ಯಗಳಿಗಾಗಿ ಬಿರ್ಜೂ ಮಹಾರಾಜ್‌ ಸಂಗೀತ ಸಂಯೋಜಿಸಿ, ಹಾಡನ್ನೂ ಹಾಡಿದರು. ನಂತರ 2002ರಲ್ಲಿ ಬಿಡುಗಡೆಯಾದ, ಶಾಹ್‌‌ರುಖ್‌ ಖಾನ್‌ ಅಭಿನಯದ ದೇವದಾಸ್‌ ಹಿಂದಿ ಚಲನಚಿತ್ರದ ಹಾಡು, ಕಾಹೇ ಛೇಡ್‌ ಮೊಹೆ ಹಾಡಿಗೆ ಬಿರ್ಜೂ ಮಹಾರಾಜ್‌ ನೃತ್ಯ ಸಂಯೋಜನೆ ಮಾಡಿದ್ದರು. ಬಿರ್ಜೂರಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಇವರ ಪೈಕಿ ಮಮತಾ ಮಹಾರಾಜ್‌, ದೀಪಕ್‌ ಮಹಾರಾಜ್‌ ಹಾಗೂ ಜಯ್‌ ಕಿಶನ್‌ ಮಹಾರಾಜ್‌ ಕಥಕ್‌ ನೃತ್ಯದಲ್ಲಿ ಪರಿಣತರಾಗಿದ್ದಾರೆ. ತ್ರಿಭುವನ್‌ ಮಹಾರಾಜ್‌ ಎಂಬ ಹೆಸರಿನ ಮೊಮ್ಮಗನೂ ಅವರಿಗಿದ್ದಾನೆ. == ಪ್ರಶಸ್ತಿಗಳು ಮತ್ತು ಗೌರವಗಳು == ಬಿರ್ಜೂ ಮಹಾರಾಜ್‌ರಿಗೆ 1986ರಲ್ಲಿ ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಳಿದಾಸ ಸಮ್ಮಾನ್‌ ಸೇರಿದಂತೆ ಹಲವು ಪ್ರಶಸ್ತಿ-ಗೌರವಗಳು ಲಭಿಸಿವೆ. ಬನಾರಸ್ (ವಾರಾಣಸಿ)‌ ಹಿಂದೂ ವಿಶ್ವವಿದ್ಯಾನಿಲಯ ಮತ್ತು ಖೈರಗಢ್‌ ವಿಶ್ವವಿದ್ಯಾನಿಲಯಗಳಿಂದ ಬಿರ್ಜೂ ಮಹಾರಾಜ್‌ರಿಗೆ ಗೌರವ ಡಾಕ್ಟರೇಟ್‌ ಸಂದಿವೆ. ಆಗ 2002ರಲ್ಲಿ ಅವರಿಗೆ ಲತಾ ಮಂಗೇಶ್ಕರ್‌ ಪುರಸ್ಕಾರ ನೀಡಿ ಗೌರವಿಸಲಾಯಿತು. ೨೦೧೩ರಲ್ಲಿ ವಿಶ್ವರೂಪಂ ಚಿತ್ರದ ನೃತ್ಯ ನಿರ್ದೇಶನಕ್ಕಗಿ ೬೦ನೇ ನ್ಯಾಷಿನಲ್ ಫಿಲಮ್ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ನೃತ್ಯ ನಿರ್ದೇಶನ'ಬಿರುದು ದೊರಕಿತು. == ವೈಯಕ್ತಿಕ ಜೀವನ ಮತ್ತು ಸಾವು == ಮಹಾರಾಜ್ ಅವರು ತಮ್ಮ 83 ನೇ ವಯಸ್ಸಿನಲ್ಲಿ 17 ಜನವರಿ 2022 ರಂದು ದೆಹಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರ ಮರಣದ ಒಂದು ತಿಂಗಳ ಮೊದಲು ಹೆಚ್ಚಿನ ಮಧುಮೇಹದಿಂದಾಗಿ ಡಯಾಲಿಸಿಸ್ ಗೆ ಒಳಗಾಗಿದ್ದರು. . == ಚಲನಚಿತ್ರಗಳ ಪಟ್ಟಿ == ಸಂಗೀತ ಸಂಯೋಜನೆ ಮತ್ತು ನೃತ್ಯ ನಿರ್ದೇಶನ ಶತರಂಜ್‌ ಕೆ ಖಿಲಾಡಿ, 1977 ದಿಲ್‌ ತೊ ಪಾಗಲ್‌ ಹೈ, 1997 : , 2001 ದೇವದಾಸ್‌‌‌ (2002) ವಿಶ್ವರೂಪಂ (೨೦೧೩) ನೃತ್ಯ ನಿರ್ದೇಶನ == ಇವನ್ನೂ ನೋಡಿ == ಕಥಕ್‌ ಕಥಕ್‌ ನೃತ್ಯಕಲಾವಿದರ ಪಟ್ಟಿ ಮಾನಿ ಮಾಧವ ಚಾಕ್ಯಾರ್‌ == ಉಲ್ಲೇಖಗಳು == , (1999). ' , , . . 8170173744. == ಹೊರಗಿನ ಕೊಂಡಿಗಳು == ಪಂಡಿತ್‌ ಬಿರ್ಜೂ ಮಹಾರಾಜ್‌ 2019-07-22 ವೇಬ್ಯಾಕ್ ಮೆಷಿನ್ ನಲ್ಲಿ. (ಅಧಿಕೃತ ಅಂತರಜಾಲತಾಣ) ಭಾರತದ ಪ್ರಮುಖ ನೃತ್ಯಗಾರರ ಬಗ್ಗೆ ಕಥಕ್‌ ಕಲಾಪರಿಣತ ಬಿರ್ಜೂ ಮಹಾರಾಜ್ (ಅಭಿಪ್ರಾಯ)